ಹಲವಾರು ಯಶಸ್ವಿ ಸಿನಿಮಾಗಳನ್ನು ನೀಡುತ್ತಾ ಬಂದಿರುವ ಎನ್ ಎಸ್ ರಾಜ್ಕುಮಾರ್ ನಿರ್ಮಾಣದಲ್ಲಿ ಪವನ್ ಒಡೆಯರ್ ನಿರ್ದೇಶಿಸಿರುವ ಶರಣ್ ಹಾಗೂ ಮಯೂರಿ ಮುಖ್ಯ ತಾರಗಣದ ‘ನಟರಾಜ ಸರ್ವೀಸ್’ ನಾಳೆಯಿಂದ ಬಿಡುಗಡೆ ಆಗುತ್ತಿದೆ.
‘ನಟರಾಜ ಸರ್ವೀಸ್’ ಚಿತ್ರ ಅಪರೂಪದ ತ್ರಿವೇಣಿ ಸಂಗಮವಾಗಿದೆ. ಯಾಕೆಂದರೆ, ಯಶಸ್ವಿ ಸಿನಿಮಾಗಳಾದ ‘ಮೈತ್ರಿ’, ‘ಜಟ್ಟ’, ‘ಮೈನಾ’ ಚಿತ್ರಗಳನ್ನು ನಿರ್ಮಿಸಿರುವ ನಿರ್ಮಾಪಕ ಎನ್ ಎಸ್ ರಾಜಕುಮಾರ್, ‘ಗೋವಿಂದಾಯ ನಮಃ’ ಚಿತ್ರದಿಂದ ನಿರ್ದೇಶಕನಾಗಿ ಪಾದಾರ್ಪಣೆ ಮಾಡಿ ಈ ವರೆಗೂ ಅನೇಕ ಸ್ಟಾರ್ ನಟರ ಸಿನಿಮಾಗಳನ್ನು ನಿರ್ದೇಶಿಸಿರುವ ಪವನ್ ಒಡೆಯರ್ ಹಾಗೂ ಮತ್ತೊಂದು ಕಡೆ ಯಶಸ್ವಿ ನಾಯಕ ಎನಿಸಿಕೊಂಡಿರುವ ಶರಣ್ ಈ ಚಿತ್ರದ ಮೂಲಕ ಒಟ್ಟು ಸೇರಿದ್ದಾರೆ. ಜೊತೆಗೆ ಕಿರುತೆರೆ ಜನಪ್ರಿಯ ನಟಿ ಹಾಗೂ ಈಗಾಗಲೇ ಎರಡು ಸಿನಿಮಾಗಳಲ್ಲಿ ನಟಿಸಿ ಪಬುದ್ಧ ನಟಿ ಎನಿಸಿಕೊಂಡಿರುವ ಮಯೂರಿ ‘ನಟರಾಜ ಸರ್ವೀಸ್’ನ ನಾಯಕಿಯಾಗಿದ್ದಾರೆ.
ಓಂಕಾರ್ ಮೂವೀಸ್ ಅಡಿಯಲ್ಲಿ ಎನ್ ಎಸ್ ರಾಜ್ಕುಮಾರ್ ಅವರ ಪುತ್ರ ಸೂರ್ಯ ಅವರ ಹೆಸರಿನಲ್ಲಿ ಈ ಚಿತ್ರ ತಯಾರಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಹಾಗೂ ಟ್ರೈಲರ್ಗಳು ಉತ್ತಮ ಹೆಸರು ಮಾಡಿವೆ.
ಈ ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸಹ ಒಂದು ಹಾಡನ್ನು ಹೇಳಿದ್ದಾರೆ. ರವಿಶಂಕರ್ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಅನೂಪ್ ಸಿಳೀನ್ ಈ ಚಿತ್ರದ ರಾಗ ಸಂಯೋಜಕರು. ಶರಣ್ ಈ ಚಿತ್ರದಲ್ಲಿ ಬಹುತೇಕ ನಡೆದಾಡುತ್ತಾ ಇರುವ ಪಾತ್ರ ನಿರ್ವಹಿಸಿದ್ದಾರೆ. ಹಾಸ್ಯದ ಜೊತೆಗೆ ಮನ ಮಿಡಿಯುವ ಸನ್ನಿವೇಶಗಳನ್ನು ಸಹಾ ಪವನ್ ಒಡೆಯರ್ ಸೇರಿಸಿದ್ದಾರೆ.
ಅರುಳ್ ಕೆ ಸೋಮಸುಂದರಂ ಛಾಯಾಗ್ರಹಣ, ಸುರೇಶ್ ಅವರ ಸಂಕಲನ, ಮುರಳಿ ಅವರ ನೃತ್ಯ, ಗುಣ ಅವರ ಕಲೆ ಈ ಚಿತ್ರಕ್ಕೆ ಇದೆ.